ಸಾಮೂಹಿಕ ಆಧ್ಯಾತ್ಮಿಕ ಜಾಗೃತಿ
ಜಾಗತಿಕ ಜ್ಞಾನೋದಯದ ಕಡೆಗೆ ಕ್ರಾಂತಿಕಾರಿ ಬದಲಾವಣೆ
ಶ್ರೀ ಮಾತಾಜಿಯವರು ಎಲ್ಲಾ ಧರ್ಮಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಕ್ರಿಶ್ಚಿಯನ್ ಪೋಷಕರಿಗೆ ಜನಿಸಿದರು. ಅವರ ತಂದೆಯಾದ ಪ್ರಸಾದ್ ಕೆ. ಸಾಳ್ವೆ ಅವರು ಧರ್ಮಶಾಸ್ತ್ರದ ಬಗ್ಗೆ ಆಕರ್ಷಿತರಾಗಿದ್ದರು ಮತ್ತು ಎಲ್ಲಾ ಪ್ರಮುಖ ಧರ್ಮಗಳ ತತ್ವಗಳನ್ನು ಅರ್ಥಮಾಡಿಕೊಳ್ಳಲು ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದ್ದರು. ಮಾನವಕುಲದ ಅಂತಿಮ ಏಕತೆಯು ಸಾಮೂಹಿಕ ಆಧ್ಯಾತ್ಮಿಕ ಜಾಗೃತಿಯನ್ನು ಅವಲಂಬಿಸಿದೆ ಎಂಬುದನ್ನು ಅವರು ಗ್ರಹಿಸಿದ್ದರು, ಇದು ಸಾವಿರಾರು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಧರ್ಮಾಧಾರಿತ ಸಂಘರ್ಷಗಳಿಗೆ ಅಂತ್ಯ ಹಾಡುತ್ತದೆ ಎಂದು ಅವರು ನಂಬಿದ್ದರು.
ಶ್ರೀ ಮಾತಾಜಿಯವರ ಪೋಷಕರು ಮಹಾತ್ಮಾ ಗಾಂಧೀಜಿಯವರ ಶಾಂತಿಯುತ ಅಸಹಕಾರ ತತ್ವದಿಂದ ಪ್ರೇರಿತರಾಗಿದ್ದರು ಮತ್ತು ಅವರ 'ಕ್ವಿಟ್ ಇಂಡಿಯಾ ಚಳುವಳಿ'[1] ಯಲ್ಲಿ ಹೆಚ್ಚಾಗಿ ಭಾಗವಹಿಸಿದ್ದರು. ಗಾಂಧೀಜಿಯವರ ಆಶ್ರಮದಲ್ಲಿ ವಾಸಿಸುತ್ತಿದ್ದ ಚಿಕ್ಕ ಬಾಲಕಿಯಾಗಿದ್ದ ಶ್ರೀ ಮಾತಾಜಿಯವರು ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮ ರೊಡನೆ ಬೆರೆಯುತಿದ್ದರು – ಇವರೆಲ್ಲರೂ ರಾಷ್ಟ್ರೀಯ ಸ್ವಾತಂತ್ರ್ಯದ ಸಾಮಾನ್ಯ ಗುರಿಯಿಂದ ಒಂದಾಗಿದ್ದರು. ನಂತರ, ಭಾರತದ ವಿಭಜನೆಯ ಸಮಯದಲ್ಲಿ, ದೇಶವು ಕೋಮು ಹಿಂಸಾಚಾರದಿಂದ ತುತ್ತಾದಾಗ , ಶ್ರೀ ಮಾತಾಜಿ ಮತ್ತು ಅವರ ಕುಟುಂಬವು ಧರ್ಮದ ಭೇದವಿಲ್ಲದೆ ಸಂಘರ್ಷದಿಂದ ತಪ್ಪಿಸಿಕೊಂಡು ಬಂದವರಿಗೆ ಆಶ್ರಯ ನೀಡಿದ್ದರು.
ಈ ತೀವ್ರ ಮತ್ತು ಕಷ್ಟಕರವಾದ ಸಮಯಗಳನ್ನು ಎದುರಿಸಿದ ಶ್ರೀ ಮಾತಾಜಿಯವರು, ರಾಜಕೀಯ ಸ್ವಾತಂತ್ರ್ಯವೇ ಅಂತಿಮ ಪರಿಹಾರವಲ್ಲ ಎಂಬುದನ್ನು ಸ್ವತಃ ಕಂಡುಕೊಂಡರು. ಮಾನವಕುಲದ ಆಧ್ಯಾತ್ಮಿಕ ಪರಿವರ್ತನೆಗೆ ಕೊಡುಗೆ ನೀಡುವುದೇ ತಮ್ಮ ಜೀವನದ ನಿಜವಾದ ಉದ್ದೇಶ ಎಂದು ಅವರು ನಿರ್ಧರಿಸಿದರು. ಆದಾಗ್ಯೂ, ಅವರು ಸರಿಯಾದ ಸಮಯಕ್ಕಾಗಿ ಕಾಯುತಿದ್ದರು. ಸಿ.ಪಿ. ಶ್ರೀವಾಸ್ತವ ಅವರೊಂದಿಗಿನ ವಿವಾಹದ ನಂತರ, ಶ್ರೀ ಮಾತಾಜಿಯವರು ತಮ್ಮ ಮಕ್ಕಳು ಬೆಳೆದು ಒಂದು ಸ್ಥಿತಿಗೆ ಬಂದ ನಂತರವೇ ತಾವು ಈ ನಿಜವಾದ ಆಧ್ಯಾತ್ಮಿಕ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಪತಿಗೆ ತಿಳಿಸಿದ್ದರು.
ಹೀಗಾಗಿ 1970 ರವರೆಗೂ ಶ್ರೀ ಮಾತಾಜಿಯವರಿಗೆ ಭೂಮಿಯ ಮೇಲೆ ತಮ್ಮ ನಿಜವಾದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಮಯ ಬಂದಿದೆ ಎಂದು ಅನಿಸಿರಲಿಲ್ಲ. ಅವರು ಈಗಾಗಲೇ ಮನುಷ್ಯರನ್ನು ಮತ್ತು ಅವರ ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದರು ಮತ್ತು ನಿಜವಾದ ಉತ್ತರಗಳು ಅವರ ಆಧ್ಯಾತ್ಮಿಕ ಜಾಗೃತಿಯಲ್ಲಿವೆ ಎಂಬುದನ್ನು ಅರಿತಿದ್ದರು, ಇದು ಕೇವಲ ಜಾಗೃತಗೊಳ್ಳಲು ಕಾಯುತ್ತಿರುವ ಒಂದು ಸುಪ್ತ ಶಕ್ತಿಯಾಗಿತ್ತು. ಧರ್ಮಗಳು ನಿಜವಾದ ಪ್ರವಾದಿಗಳ ಬೋಧನೆಗಳ ಮೇಲೆ ಆಧಾರಿತವಾಗಿದ್ದರೂ, ಮಾನವ ಪ್ರಜ್ಞೆಯಲ್ಲಿ ಈ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರು ತಿಳಿದಿದ್ದರು. ಒಂದು ಸಂಜೆ, ನಿಜವಾದ ಆಧ್ಯಾತ್ಮಿಕತೆಯ ಭರವಸೆ ನೀಡಿ ಜನರಿಂದ ಹಣವನ್ನು ಲೂಟಿ ಮಾಡುತ್ತಿದ್ದ ಭಾರತದ ನಕಲಿ ಗುರುಗಳಿಂದ ಬೇಸತ್ತ ಅವರು, ಇನ್ನು ಮುಂದೆ ಕಾಯಬಾರದು ಎಂದು ನಿರ್ಧರಿಸಿದರು.ಮೇ 5, 1970 ರ ಮುಂಜಾನೆ, ಅಮಾವಾಸ್ಯೆಯ ರಾತ್ರಿಯ ಕೊನೆಯಲ್ಲಿ, ಏಕಾಂತ ಸಮುದ್ರ ತೀರದಲ್ಲಿ ಧ್ಯಾನ ಮಾಡುತ್ತಿದ್ದಾಗ, ಅವರು ತಮ್ಮದೇ ಆದ ಸೂಕ್ಷ್ಮ ಅಸ್ತಿತ್ವದೊಳಗೆ ಸೃಷ್ಟಿಯ ಆದಿ ಶಕ್ತಿಯ ಜಾಗೃತಿಯನ್ನು ಅನುಭವಿಸಿದರು. ಈ ಆಳವಾದ ಆಧ್ಯಾತ್ಮಿಕ ಅನುಭವವು, ಸತ್ಯವನ್ನು ಹುಡುಕುವ ಮನುಷ್ಯರಲ್ಲಿ ಶಾಶ್ವತ ಆತ್ಮದ ಪ್ರಜ್ಞೆಯನ್ನು ಹೇಗೆ ಜಾಗೃತಗೊಳಿಸಬೇಕು ಎಂಬ ಬಗ್ಗೆ ಅವರು ತಮ್ಮ ಜೀವನದಲ್ಲಿ ಹುಡುಕುತ್ತಿದ್ದ ಎಲ್ಲಾ ಉತ್ತರಗಳನ್ನು ನೀಡಿತು. ಈ ಐತಿಹಾಸಿಕ ಘಟನೆಯು ಅವರ ಜೀವನದಲ್ಲಿ ಒಂದು ಪ್ರಮುಖ ತಿರುವು(opens in new tab) ಮತ್ತು ಸಾಮೂಹಿಕ ಆಧ್ಯಾತ್ಮಿಕ ಜಾಗೃತಿಯ ವಿಶಿಷ್ಟ ಆವಿಷ್ಕಾರವನ್ನು ಗುರುತಿಸಿತು. ನಂತರ ಅವರು 'ಸಹಜ ಯೋಗ(opens in new tab)' ಎಂದು ಕರೆಯಲ್ಪಡುವ ತಂತ್ರವನ್ನು ಸ್ಥಾಪಿಸಿದರು, ಇದರ ಅಕ್ಷರಶಃ ಅರ್ಥ ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಹೊಂದಿರುವ ಆದರೆ ಅರಿಯದೇ ಇರುವ ದೈವಿಕ ಶಾಶ್ವತ ಶಕ್ತಿಯೊಂದಿಗಿನ ಮಿಲನವಾಗಿದೆ.
ಸಹಜ ಯೋಗವು ಒಂದು ಸರಳ ಮತ್ತು ಸುಲಭವಾದ ಧ್ಯಾನದ ರೂಪವಾಗಿದ್ದು, ಪ್ರತಿಯೊಬ್ಬ ಮನುಷ್ಯನಲ್ಲೂ ನೆಲೆಸಿರುವ ಸೂಕ್ಷ್ಮ ಹಾಗೂ ಶಕ್ತಿಶಾಲಿ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಸತ್ಯದ ಈ ಕ್ಷಣವನ್ನು 'ಆತ್ಮಸಾಕ್ಷಾತ್ಕಾರ(opens in new tab)' (ಸೆಲ್ಫ್-ರಿಯಲೈಸೇಶನ್) ಎಂದು ಕರೆಯಲಾಗುತ್ತದೆ: ಇದು ಅನಾದಿ ಕಾಲದಿಂದಲೂ ಪ್ರಪಂಚದಾದ್ಯಂತದ ಧಾರ್ಮಿಕ ಅತೀಂದ್ರಿಯರ ಕಠಿಣ ಗುರಿಯಾಗಿದೆ.
ಆತ್ಮಸಾಕ್ಷಾತ್ಕಾರ ಎಂಬುದು ಜೀವಿತಾವಧಿಯ ತಪಸ್ಸು ಮತ್ತು ತ್ಯಾಗದ ಮೂಲಕ ಮಾತ್ರ ತಲುಪಬಹುದಾದ ದೂರದ ಗುರಿಯಲ್ಲ, ಬದಲಿಗೆ ಇದನ್ನು ಇಲ್ಲಿ ಮತ್ತು ಈಗಲೇ ಸಾಧಿಸಬಹುದು ಎಂದು ಶ್ರೀ ಮಾತಾಜಿ ಘೋಷಿಸಿದರು. ತಮ್ಮ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಯಾವಾಗಲೂ "ನಿಮ್ಮ ಒಡೆಯರು ನೀವೇ" ಎಂದು ಹೇಳುತ್ತಿದ್ದರು, ನಮ್ಮನ್ನು ಜ್ಞಾನೋದಯದತ್ತ ಕೊಂಡೊಯ್ಯಲು ಯಾವುದೇ ಮಧ್ಯವರ್ತಿಯನ್ನು ಅವಲಂಬಿಸದೆ, ನಾವೇ ನಮಗೆ ಗುರುವಾಗಬೇಕು ಮತ್ತು ಸತ್ಯದ ನಮ್ಮದೇ ನೇರ ಅನುಭವವನ್ನು ಅವಲಂಬಿಸಬೇಕು ಎಂದು ಒತ್ತಿಹೇಳುತ್ತಿದ್ದರು. ಇದಲ್ಲದೆ, ತಾವು ಹೇಳುತ್ತಿರುವುದು ಒಂದು ಸಿದ್ಧಾಂತವಾಗಿದ್ದು, ಜನರು ಅದನ್ನು ತಾವಾಗಿಯೇ ಪರೀಕ್ಷಿಸಬೇಕು ಮತ್ತು ಕುರುಡು ನಂಬಿಕೆಯು ಯಾರನ್ನೂ ಎಲ್ಲೂ ತಲುಪಿಸುವುದಿಲ್ಲ ಎಂಬುದನ್ನು ಶ್ರೀ ಮಾತಾಜಿಯವರು ಯಾವಾಗಲೂ ಸ್ಪಷ್ಟಪಡಿಸುತ್ತಿದ್ದರು.
ನಿಜವಾದ ಧರ್ಮವು ಮಡಿವಂತಿಕೆ ಮತ್ತು ಶ್ರೇಣೀಕೃತ ವ್ಯವಸ್ಥೆಯ ಮೇಲೆ ಆಧಾರಿತವಾಗಿಲ್ಲ, ಬದಲಿಗೆ ಆತ್ಮದ ರೂಪದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತಿಳಿದುಕೊಳ್ಳುವುದರ ಮೇಲೆ ಆಧಾರಿತವಾಗಿದೆ ಎಂದು ಶ್ರೀ ಮಾತಾಜಿ ಪ್ರತಿಪಾದಿಸಿದರು. ಅವರು ಹೇಳಿದಂತೆ, “ಎಲ್ಲಾ ಧರ್ಮಗಳೂ ಆಧ್ಯಾತ್ಮಿಕತೆ ಎಂಬ ಒಂದೇ ಜೀವನದ ವೃಕ್ಷದಿಂದ ಬಂದಿವೆ... ಧರ್ಮವು ನಿಮಗೆ ಶಾಂತಿ, ಸಂತೋಷ, ಆನಂದವನ್ನು ನೀಡಲು ಇದೆ... ಅವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ – ಆದರೆ ನಿಮ್ಮನ್ನು ನೀವೇ ತಿಳಿದುಕೊಳ್ಳದಿದ್ದಾಗ, ಧರ್ಮದ ಬಗ್ಗೆ ನಿಮಗೇನು ತಿಳಿಯಲು ಸಾಧ್ಯ? ಆದ್ದರಿಂದ, ಎಲ್ಲಕ್ಕಿಂತ ಮೊದಲು ನೀವು ನಿಮ್ಮನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.” ನಿಮ್ಮನ್ನು ನೀವು ಆಧ್ಯಾತ್ಮಿಕ ಜೀವಿಯೆಂದು ಗುರುತಿಸಿಕೊಂಡಾಗ, "...ನೀವು ಅನುಸರಿಸುತ್ತಿರುವ ಧರ್ಮ ಯಾವುದಿದ್ದರೂ ಅದನ್ನು ನೀವು ಅರ್ಥಮಾಡಿಕೊಳ್ಳುವಿರಿ... ಮತ್ತು ಈ ಎಲ್ಲಾ ಪ್ರವಾದಿಗಳು ಹಾಗೂ ಗುರುಗಳ ಹಿರಿಮೆಯನ್ನು ಗ್ರಹಿಸುವಿರಿ...".
ಒಬ್ಬ ಗುರು ಅಥವಾ ಶಿಕ್ಷಕರಿಗಿಂತ ಹೆಚ್ಚಾಗಿ, ಶ್ರೀ ಮಾತಾಜಿಯವರನ್ನು ಕರುಣೆ ಮತ್ತು ಪ್ರೀತಿಯಿಂದ ಪ್ರೇರಿತರಾದ ಹಾಗೂ ಇಡೀ ಮಾನವಕುಲದ ಕಲ್ಯಾಣ ಮತ್ತು ವಿಕಾಸಕ್ಕಾಗಿ ಕಾಳಜಿ ವಹಿಸುವ 'ಆಧ್ಯಾತ್ಮಿಕ ತಾಯಿ' ಎಂದು ಬಣ್ಣಿಸಬಹುದು. ಅವರ ದೂರದೃಷ್ಟಿ ಮತ್ತು ದಣಿವರಿಯದ ಪ್ರಯತ್ನಗಳ ಫಲವಾಗಿ, ಸಹಜ ಯೋಗವು ನೂರಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಾಪಿತವಾಗಿದೆ ಮತ್ತು ಲಕ್ಷಾಂತರ ಜನರು ತಮ್ಮ ಜೀವನದಲ್ಲಿ ಸಮತೋಲನ ಹಾಗೂ ತೃಪ್ತಿಯನ್ನು ಸಾಧಿಸಿದ್ದಾರೆ. ಕೆಲವರು ಆತ್ಮಸಾಕ್ಷಾತ್ಕಾರದ ಅನುಭವ ಮತ್ತು ಸಹಜ ಯೋಗ ಧ್ಯಾನದ(opens in new tab) ನಿಯಮಿತ ಅಭ್ಯಾಸದ ಮೂಲಕ ಗಂಭೀರ ಮಾನಸಿಕ ಮತ್ತು ದೈಹಿಕ ನ್ಯೂನತೆಗಳನ್ನು ನಿವಾರಿಸಿಕೊಂಡಿದ್ದಾರೆ.